Sunday, April 19, 2009

ಸಾಂತ್ವನ


ನೊಂದ ಜೀವವೊಂದಳುತಲಿದೆ ಖಾಲಿ ಹೃದಯದಲಿ
ಹುಡುಕಾಟ ನಡೆಸುತಿದೆ ಏಕಾಂತದೂರಿನಲಿ
ಪಯಣವ ಸಾಗಿಸುತಿದೆ ಒಂಟಿ ಹಾದಿಯಲಿ
ಕಂಬನಿಯು ಜಾರುತಿದೆ ಕಣ್ಣಿನಣೆಕಟ್ಟೆಯಲಿ...

ನೋಡುವೆಯಾ ನೀನೊಮ್ಮೆ ಹೊಳೆವ ರವಿಯನ್ನು
ವಿಶಾಲಾಗಸದಿ ಏಕಾಂಗಿಯವನು,
ನಲಿಸುವನು ಸಕಲ ಜೀವ ರಾಶಿಯನು
ನೀಡುವನು ಎಲ್ಲರಿಗೂ ಬಾಳ್ವ ಶಕ್ತಿಯನು

ಮಿನುಗುತಿರುವನು ನೋಡು ಆ ಚಂದಿರ
ತಾರೆಗಳು ನೂರಾರು, ದೂರ ದೂರ
ಕಾರಿರುಳ ನಡುವೆ ಒಬ್ಬಂಟಿಯವನು
ಆದರೂ ತಂಪ ಬೀರಿ, ನಗುತಲಿಹನು

ಅಬ್ಬರದಿ ಭೋರ್ಗರೆವ ಸಾಗರವ ನೋಡು
ಏನಾದರೂ ನಿಲ್ಲದು ಮೊರೆವ ಅಲೆಗಳ ಬೀಡು
ಸಂಜೆಯಾದಂತೆ, ಬಹು ಜನರ ನಾಡು
ಮತ್ತೆಲ್ಲ ಸಮಯದಲಿ ಮೌನದ ಹಾಡು

ಸಾಕಿನ್ನು ರೋಧನ, ಓ ನೊಂದ ಜೀವವೇ..
ನಾವಿಹೆವು ಜೊತೆಗೆ, ಕಣ್ಣೀರ ತಡೆಯುವೆವು
ಬಾಡಿರುವ ಬೇರನು ಮತ್ತೆ ಚಿಗುರಿಸುವೆವು
ಚಿಗುರಿಸಿದ ಮನದಲಿ ಹೊನ್ನ ಹೂವರಳಿಸುವೆವು

ಹೊರಹಾಕು ಅಮುಕಿಟ್ಟ ಜ್ವಾಲಾಮುಖಿಯನು
ಆರಂಭಿಸು ಮತ್ತೆ ಹೊಸ ಜೀವನವನು
ಮೂಡಲಿ ಮನದಲಿ ಹೊಸ ಲಾವಣ್ಯ
ನವೀನ ಆರಂಭಕೆ ನವ ಚೈತನ್ಯ .....

8 comments:

  1. ವಾಹ್,,,,, ಸೂಪರ್ ಆಗಿ ಇದೆ ನೊಂದ ಮನಸಿಗೆ ಬೇಕಾಗುವ ಸಾಂತ್ವನ ಕವನ....
    ನೀವು ತುಂಬ ಚೆನ್ನಾಗಿ ಕವನ ಬರಿತಿರ ದಿವ್ಯ.....good keep it up..
    ಗುರು

    ReplyDelete
  2. ದಿವ್ಯ,
    ನೊಂದ ಜೀವಕ್ಕೆ ಖಂಡಿತ ಸಾಂತ್ವನ ಸಿಕ್ಕುತ್ತೆ, ಅದರಲ್ಲೂ ಪ್ರತಿ ಸಾಲಿನಲ್ಲೂ ಒಂದು ಆತ್ಮೀಯತೆ ಮನ ಸೆಳೆಯುತ್ತದೆ.
    ಮುದ್ದಾದ ಕವನ...

    ReplyDelete
  3. ಗುರು, ರಾಜೇಶ್,
    ತುಂಬಾ ಧನ್ಯವಾದಗಳು..ನೊಂದ ಜೀವಕ್ಕೆ ಸಾಂತ್ವನ ಸಿಕ್ಕುತ್ತೆ ಅಂತಾದ್ರೆ,ಕವನ ಸಾರ್ಥಕವಾಯ್ತು...

    ReplyDelete
  4. ಸುಪರ್ ದಿವ್ಯ. ತು೦ಬಾ ಚೆನ್ನಾಗಿದೆ ಕವನ. ಗುಡ್

    ReplyDelete
  5. ದಿವ್ಯ,
    ತುಂಬಾ ಸೊಗಸಾಗಿದೆ ನಿಮ್ಮ ಕವನ, ಹೀಗೆ ಬರೆಯುತ್ತಿರಿ

    ReplyDelete
  6. ಸುನಿಲ್, ಗುರು - ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ :-)

    ReplyDelete
  7. ತು೦ಬಾ ಚೆನ್ನಾಗಿದೆ :)

    ReplyDelete
  8. ಕಾರಣ,
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು :-)

    ReplyDelete