Saturday, January 30, 2010

ಕರವಸ್ತ್ರ ಪುರಾಣ


ಪ್ರೌಢ ಶಾಲಾ ವಾರ್ಷಿಕೋತ್ಸವ ಸಮಾರಂಭ. ಮಕ್ಕಳಿಗೆಲ್ಲ ಇನ್ನಿಲ್ಲದ ಸಂಭ್ರಮ. ನೃತ್ಯ ನಾಟಕ ಯಕ್ಷಗಾನದಲ್ಲಿ ಭಾಗವಹಿಸುವವರೆಲ್ಲಾ ಆಯಾ ಪ್ರಕಾರ/ಪಾತ್ರಕ್ಕೆ ತಕ್ಕಂತೆ ಸಕಲ ವೇಷ ಭೂಷಣಗಳೊಂದಿಗೆ ಸಜ್ಜಿತರಾಗಿ ಪರದೆಯ ಹಿಂಭಾಗಕ್ಕೆ ಬಂದು ನಿಲ್ಲುತ್ತಿದ್ದಾರೆ. ಪ್ರತಿ ಒಂದು ಕಾರ್ಯಕ್ರಮ ಮುಗಿದಾಗಲೂ ಮುಂದಿನ ಕಾರ್ಯಕ್ರಮ ನೀಡಲಿರುವ ಮಕ್ಕಳ ಉತ್ಸಾಹ ದ್ವಿಗುಣಗೊಳ್ಳುತ್ತಿದೆ! ಇದೀಗ ಮುಂದಿನ ಕಾರ್ಯಕ್ರಮ "ಸಂಸ್ಕ್ರತ ನಾಟಕ - ಶಾಲಾ ವಿದ್ಯಾರ್ಥಿಗಳಿಂದ" ಎಂಬ ನಿರ್ವಾಹಕರ ಘೋಷಣೆಯ ನಂತರ ವೇದಿಕೆಯ ಪರದೆ ಸರಿಯುತ್ತದೆ. ಮಹಾರಾಜ ವೇದಿಕೆಗೆ ಬರುತ್ತಾನೆ. ಉನ್ನತ ವಿಚಾರ ಧಾರೆಯ ಸಂಭಾಷಣೆ ಆರಂಭವಾಗುತ್ತದೆ... ಆಗ ಪ್ರೇಕ್ಷಕರ ಮಧ್ಯೆ ಕೂತಿರುವ ಒಂದು ಧ್ವನಿ ತನ್ನ ಪಕ್ಕದಲ್ಲಿರುವ ಅಮ್ಮನ ಕಿವಿಯಲ್ಲಿ ಉಸುರುತ್ತದೆ "ಅಯ್ಯೋ ಇದೇನು ಅಕ್ಕ ಮಹಾರಾಜನಾದಾಗ್ಲೂ ಕರ್ ಚೀಫ್ ಹಿಡ್ ಕೊಳ್ಳೋದ್ ಬಿಟ್ಟಿಲ್ವಲ್ಲಾ :-( " ಎಂದು! ಮತ್ತೆ ನಾಟಕ ಮುಗಿದ ಮೇಲೆ ಮಹಾರಾಜನಿಗೆ ಎಲ್ಲ ಗೆಳತಿಯರ ತಮಾಷೆ! ತಂಗಿಯ ಬಯ್ಗುಳ!!

*****

ಹೌದು.. ಇದು ನನ್ನದೇ ಇತಿಹಾಸ! ನನಗೂ ಕರವಸ್ತ್ರಕ್ಕೂ ಒಂದು ಅಭೇದ್ಯ ನಂಟು - ಯಾರಿಂದಲೂ ಬಿಡಿಸಲಾಗದ್ದು ; ಏನೇ ಆದರೂ ತೊರೆಯಲಾಗದ್ದು! ಬಹುಷಃ ಜೀವನದಲ್ಲಿ ಈ ತನಕ ಯಾರ ಜೊತೆಯೂ ಇಲ್ಲದಷ್ಟು ;-) ಅದು ನನ್ನ ದೇಹದ ಒಂದು ಅವಿಭಾಜ್ಯ ಅಂಗವಾಗಿದೆಯೇನೋ ಎಂಬಷ್ಟು! ಕೆಲವೊಮ್ಮೆ ನನಗೇ ಆಶ್ಚರ್ಯ ಆಗುತ್ತೆ - ಅದೇಕೆ ನನಗೆ ಅದರ ಜೊತೆ ಅಂತಹ ನಂಟು ಎಂದು. ಯಾಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬಹುದೇನೋ. ಆದರೆ ಬೆಸೆದಿರುವ ನಂಟನ್ನು ಮಾತ್ರ ತೊರೆಯುವುದು ಅಸಾಧ್ಯ. ಎಲ್ಲೋ ಒಂದೆರಡು ಕ್ಷಣ ಅದು ನನ್ನ ಕೈಯಲ್ಲಿರದಿದ್ದರೆ ಏನೋ ಕಳಕೊಂಡಂತೆ ಭಾಸವಾಗಿ, ಕೂಡಲೇ ಹುಡುಕಿ ಅದನ್ನು ಮತ್ತೆ ಕೈಯೊಳಗೆ ಸೇರಿಸದಿದ್ದರೆ ನನ್ನ ಮುಂದಿನ ಕೆಲಸ ಆಗುವುದೇ ಇಲ್ಲವೇನೋ ಅನ್ನುವಷ್ಟು ಕಷ್ಟ!

ಛೆ ಅದೇಕೆ ಹಾಗೆ ಎಂದು ಎಷ್ಟೋ ಸಲ ಯೋಚಿಸುವುದಿದೆ. 'ರಾಜ್ಹ್ - ಪಿಚ್ಲೇ ಜನಮ್ ಕಾ' ದಲ್ಲಿ ತೋರಿಸುವಂತೆ ನಾನು ನನ್ನ ನೆನಪಿನ ಗಡಿಯಾರವನ್ನು ಹಿಂದಿರುಗಿಸಿದರೆ(ಹಿಂದಿನ ಜನ್ಮದ ತನಕ ಅಲ್ಲ ಬಿಡಿ) ನನ್ನ ಕಣ್ಣೆದುರು ಬಂದು ನಿಲ್ಲುವುದು ನೆಗಡಿ ರಾಯ! ನೆಗಡಿಯೆಂದರೆ ನನ್ನ ಜೀವನದಲ್ಲಿ ನಿರಂತರ ನೆಂಟ - ಕರೆಯದೆ ಬರುವ ಅತಿಥಿ! ಅತಿ ಚಿಕ್ಕಂದಿನಿಂದ ಕರವಸ್ತ್ರದ ಜೊತೆ ನಂಟು ಬೆಸೆಯಲು ಈ ನೆಂಟನೆ ಕಾರಣ. ದಿನವೂ ಬೆಳಿಗ್ಗೆ ಸೂರ್ಯ ನೆತ್ತಿಯ ಮೇಲೆ ಬರುವ ತನಕ ನನಗೂ ನೆಗಡಿಗೂ ಭಾರೀ ಸಖ್ಯ ಇತ್ತು. ಹಾಗಾಗಿ ಈ ಕರವಸ್ತ್ರ ಮಹಾಶಯನನ್ನು ನಾನು ಅದೆಷ್ಟು ನೆಚ್ಚಿಕೊಂಡುಬಿಟ್ಟೆನೆಂದರೆ - ಎಂದೂ ಬಿಡಲಾರದಷ್ಟು!! ಶಾಲೆಗೆ ಹೋಗುವ, ಸಮವಸ್ತ್ರ ಧರಿಸಿರುವ ಪುಟ್ಟ ಮಕ್ಕಳ ಅಂಗಿಗೆ ಅವರ ಅಮ್ಮಂದಿರು ಪಿನ್ ಮಾಡಿರುವ ಕರವಸ್ತ್ರವನ್ನು ನೋಡಿದಾಗಲಂತೂ "ಅಯ್ಯೋ ನನಗೂ ಇದೇ ಥರ ಮಾಡಿದ್ದರೆ ಪರಿಸ್ಥಿತಿ ಈ ಮಟ್ಟಿಗೆ ಬರುತ್ತಿರಲಿಲ್ಲವೇನೋ" ಎಂದು ಅನಿಸುವುದಂತೂ ನಿಜ!

ಈ ಶಾಲಾ ನಾಟಕದ ಪ್ರಸಂಗವಾದ ನಂತರವಂತೂ ತೀರಾ ಆಪ್ತವಲಯದಲ್ಲಿ ಕರವಸ್ತ್ರಕ್ಕೆ ನನ್ನ 'ಗಧೆ' ಅಂತ ನಾಮಕರಣ ಮಾಡಲಾಯಿತು. ಆಪ್ತ ಗೆಳತಿಯರಂತೂ ಕರವಸ್ತ್ರವನ್ನು ಬೇಕೆಂದೇ ಅಡಗಿಸಿಟ್ಟು ಆಟ ಆಡಿಸಿದ್ದೂ ಇದೆ. ಕರವಸ್ತ್ರ ಒಂದೆರಡು ನಿಮಿಷ ಕಾಣೆಯಾದರೆ, ಅದನ್ನು ಹುಡುಕುತ್ತ ನಾನು ಚಡಪಡಿಸುವುದನ್ನು ನೋಡಿ ಮಜಾ ತಗೋಳೋದು ಕೂಡ ನನ್ನ ಗೆಳತಿಯರ ಸಂತೋಷದ ಟೈಮ್ ಪಾಸ್! ರಾವಣ ಶಿವಲಿಂಗವನ್ನು ಹಿಡಿದಂತೆ ನಾನೂ ನನ್ನ ಕರವಸ್ತ್ರವನ್ನು ಕೆಳಗೆ ಇಡುವುದೇ ಕಡಿಮೆ. ಸದಾ ಕೈಯಲ್ಲಿ ಅದೂ 'ಮುದ್ದೆ'ಯಾಗಿರುವ ಸ್ಥಿತಿಯಲ್ಲಿ ಹಿಡಿದುಕೊಂಡರೇನೆ ನನಗೆ ನೆಮ್ಮದಿ:-) ಆದರೂ ಎಲ್ಲೋ ಒಂದು ಕಡೆ ಕೈ ತಪ್ಪಿ ಇಟ್ಟೆನೆಂದರೆ ನೋಡಿದವರು, 'ಓಹ್ ಯಾವುದೋ ಒಗೆಯಲಿಕ್ಕೆ ಹಾಕಬೇಕಾಗಿರುವ ಬಟ್ಟೆ' ಎಂದೆನಿಸಿ, ಇನ್ನಾವುದೇ(!) ಕಾರ್ಯಕ್ಕೆ ಉಪಯೋಗಿಸಿ , ಮತ್ತೆ ಒಗೆಯಲಿರುವ ಬಟ್ಟೆಗಳ ಗುಂಪಿಗೆ ಸೇರಿಸಿದ್ದೂ ಉಂಟು!! (ಒಮ್ಮೆ ಗೊತ್ತಾದ್ರೆ ಆಮೇಲೆ ಮಾಡೋಲ್ಲ.) ಇನ್ನು ಕೆಲವೊಮ್ಮೆ ಅಸ್ಪ್ರಶ್ಯ ವಸ್ತುವಿನಂತೆ ಪರಿಗಣಿಸಿದ್ದೂ ಇದೆ!! ಏನೋ ಒಂದು ಡಬ್ಬಿಯಿಂದ ಇನ್ನೊಂದು ಪಾತ್ರೆಗೆ ವರ್ಗಾವಣೆ ಮಾಡುವಾಗ ಕೈ ತಪ್ಪಿ ಸಾಮಾನೆಲ್ಲಾ ನೆಲದ ಪಾಲಾದುದರ ಶಾಪ/ಪಾಪ ಕರವಸ್ತ್ರಕ್ಕೆ ಬರುತ್ತಿತ್ತು (ಯಾಕೆಂದ್ರೆ ಕರವಸ್ತ್ರ ಹಿಡಿದುಕೊಂಡೆ ಆ ಕೆಲಸ ಮಾಡಿರುತ್ತೇನೆ) . ಇನ್ನು ಸಂದರ್ಶನಗಳನ್ನು ಎದುರಿಸುವ ಸಂದರ್ಭದಲ್ಲಿ ಈ ರೀತಿ ಕರವಸ್ತ್ರ ಹಿಡಿಯೋದು 'ಆತ್ಮವಿಶ್ವಾಸದ ಕೊರತೆ'ಯ ಸಂಕೇತ ಅಂತೆಲ್ಲ ಹಿತವಚನಗಳು ಕೇಳಿ ಬಂದರೂ, ನಾನು ಕರವಸ್ತ್ರವಿಹೀನಳಾಗಿ ಸಂದರ್ಶನ ಎದುರಿಸಲಿಲ್ಲ ಬಿಡಿ. ಅಂತೂ ಆ ಸಂದರ್ಭದಲ್ಲಿ ಏನೂ ತೊಂದರೆ ಆಗಿಲ್ಲ ನನ್ನ ಕರವಸ್ತ್ರದಿಂದ.

ಆದರೆ, ಪ್ರತಿಕೂಲತೆಗಳಷ್ಟೇ ಅನುಕೂಲಗಳು ಇದ್ದವು ಅನ್ನೋದು ಸಂತೋಷದ ವಿಚಾರ! ಕರವಸ್ತ್ರದ ಕುರಿತು ಯಾರ ಜೊತೆಯಲ್ಲಿಯಾದರೂ ಮಾತಾಡಿದರೆ ಮೊದ್ಲು ಗೊತ್ತಾಗೋದು ಎಷ್ಟು ಬೇಗ ಎಷ್ಟು ಕರವಸ್ತ್ರಗಳನ್ನು ಕಳೆದು ಕೊಳ್ಳುತ್ತಾರೆ ಅಂತ! ಆದ್ರೆ ಈ ಥರ ನಂಟು ಇರೋ ನಾನು ಕರವಸ್ತ್ರಗಳನ್ನು ಕಳಕೊಂಡಿದ್ದೆ ಇಲ್ಲ ಅನ್ನಬಹುದೇನೋ! ಇನ್ನು 'rapid game' ನಂತಹ ಆಟಗಳಲ್ಲಿ ಕರವಸ್ತ್ರ(ಅದೂ ladies ಅಂತಾನೆ specific ಆಗಿ) ಕೇಳಿದಾಗೆಲ್ಲಾ ನಾನಿರೋ ಟೀಂ ಯಾವತ್ತೂ ಲಕ್ಕಿ :-) ದೇವಸ್ಥಾನಕ್ಕೆ ಊಟಕ್ಕೆ ಹೋದಾಗ (ಕೆಳಗೆ ಕೂರೋವಾಗ) ಚಂದದ ಚೂಡಿಯನ್ನು ಕಾಪಾಡಿದ ಹೆಗ್ಗಳಿಕೆಯೂ ನನ್ನ ಕರವಸ್ತ್ರಕ್ಕೆ ಸಲ್ಲುತ್ತದೆ! ಮಲ್ಪೆ ಸಮುದ್ರ ತೀರದ ಮರಳಿನಲ್ಲಿ "ಸೊಪ್ಪಾಟ" ಆಡುವ ಭರದಲ್ಲಿ ಪಾದದೊಳಗೆ ಗಾಜಿನ ಚೂರು ಪ್ರವೇಶಿಸಿ, ನೆತ್ತರು ಹರಿದಾಗಲೂ, ಕೂಡಲೇ ಅದನ್ನು ತಡೆಯಲು ದೊರೆತಿದ್ದು ನನ್ನ ಕರವಸ್ತ್ರವೇ ಹೊರತು ಯಾವ ಫಸ್ಟ್ ಏಡ್ ಕಿಟ್ಟೂ ಅಲ್ಲ ! ಇನ್ನು ಸಂದರ್ಶನದಲ್ಲಿ "what are different uses of hanky" ಅಂತ ಕೇಳಿದಾಗ ಬಹುಷಃ ನನ್ನಷ್ಟು ದೊಡ್ಡ ಪಟ್ಟಿ ಯಾರೂ ಹೇಳಿರಲಿಕ್ಕಿಲ್ಲ! ಮುಂದೊಂದು ದಿನ ಪ್ರಿಯತಮನಿಗಾಗಿಯೂ ನಾನು ದುಪಟ್ಟಾ ಅಥವಾ ಸೆರಗಿನ ತುದಿ ಉಪಯೋಗಿಸುವ ಅವಶ್ಯಕತೆಯನ್ನು ನನ್ನ ಕರವಸ್ತ್ರವೇ ಪೂರೈಸಬಹುದೇನೋ! :-)

Monday, January 4, 2010

ವರ್ಷ ತುಂಬಿದ ಸಂಭ್ರಮದಲ್ಲಿ!


ಇಂದು "ಭಾವ ಜೀವ ತಳೆದಾಗ"ಕ್ಕೆ ವರ್ಷ ತುಂಬಿದ ಸಂಭ್ರಮ. ಒಮ್ಮೆ ಹಿನ್ನೋಟ ಬೀರಿದಾಗ ಆಶ್ಚರ್ಯ ಖುಷಿ ಜೊತೆಜೊತೆಗೆ ಆಗುತ್ತಿದೆ. ಆಶ್ಚರ್ಯ ಯಾಕೆಂದರೆ - ಬ್ಲಾಗು ಆರಂಭ ಮಾಡುವಾಗ, ಅಂತರ್ಜಾಲದಲ್ಲಿ ಇಷ್ಟೊಂದು ಕನ್ನಡ ಬ್ಲಾಗುಗಳಿವೆ ಎಂದಾಗಲೀ, ಇಷ್ಟೊಂದು ಸಂಖ್ಯೆಯ ಕನ್ನಡ ಅಭಿಮಾನ, ಸಾಹಿತ್ಯಾಸಕ್ತಿ ಇರುವ ಮಿತ್ರರೂ ಸಿಗುತ್ತಾರೆ ಎಂಬ ಯೋಚನೆಯಾಗಲೀ ನನಗೆ ಇರಲೇ ಇಲ್ಲ ಎನ್ನುವುದಕ್ಕೆ. ಖುಷಿ ಯಾಕೆಂದರೆ - ನಿರೀಕ್ಷೆಗೆ ಮೀರಿ ಕನ್ನಡ ಬರಹಗಳನ್ನು, ಬ್ಲಾಗುಗಳನ್ನು, ಸ್ನೇಹಿತರನ್ನು ಕಂಡುಕೊಂಡಿದ್ದಕ್ಕೆ, ಎಲ್ಲರ ಪ್ರೋತ್ಸಾಹ ದೊರಕಿದ್ದಕ್ಕೆ. ಈ ಅಭಿಯಾನದಲ್ಲಿ ನಿರಂತರ ಪ್ರೋತ್ಸಾಹ, ಸಲಹೆ ಸೂಚನೆಗಳನ್ನು ನೀಡಿದ ಸಹೃದಯ ಮಿತ್ರರಿಗೆಲ್ಲಾ ನಾನು ಸದಾ ಋಣಿ.

ಈ ಸಂದರ್ಭದಲ್ಲಿ ನಾನು ಬ್ಲಾಗು ಆರಂಭಿಸಿದ ಹಿನ್ನೆಲೆ, ನನ್ನಲ್ಲಿ ಮೂಲತಹ ಸಾಹಿತ್ಯಾಸಕ್ತಿ ಮೂಡಿದ ಬಗೆ - ಇವೆಲ್ಲಾ ನನ್ನ ನೆನಪಿನಾಳದಿಂದ ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿವೆ. ಪ್ರಥಮವಾಗಿ ನನ್ನಲ್ಲಿ ಸಾಹಿತ್ಯಾಸಕ್ತಿ ಮಾಡಿದ್ದು - ಶಾಲಾ ದಿನಗಳಲ್ಲಿ. ನನ್ನ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ಪಾಠ ಪ್ರವಚನಗಳಷ್ಟೇ, ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹವಿತ್ತು. ಅದಕ್ಕಾಗಿಯೇ ನನ್ನ ಶಾಲೆ, ಶಾಲಾ ಶಿಕ್ಷಕ-ಶಿಕ್ಷಕಿಯರ ಬಗ್ಗೆ ನನಗೆ ತುಂಬಾ ಅಭಿಮಾನ, ಪ್ರೀತಿ. ಬಹುಷಃ ಎಲ್ಲರ ಜೀವನದಲ್ಲೂ, ಕಾಲೇಜಿನ ದಿನಗಳಿಗಿಂತ ಶಾಲಾ ದಿನಗಳ ನೆನಪುಗಳೇ ಮಧುರವಾಗಿರಬಹುದು. ಆ ಪ್ರಾಯವೇ ಅಂಥದ್ದು - ಮುಗ್ಧತೆ ಇನ್ನೂ ಮಾಸಿರುವುದಿಲ್ಲ; ಮಹತ್ತರವಾದ ಬೇರೆ ಜವಾಬ್ದಾರಿ/ಒತ್ತಡಗಳೂ ಇರುವುದಿಲ್ಲ (ಈಗಿನ ಮಕ್ಕಳ ಬಗ್ಗೆ ಗೊತ್ತಿಲ್ಲ :-( !! ). ನನ್ನ ಬಾಲ್ಯವನ್ನು ಅತ್ಯಂತ ಮಧುರವನ್ನಾಗಿಸಿದ್ದು - ನಾನು ಕಲಿತ ಶಾಲೆ, ನನ್ನ ಅಧ್ಯಾಪಕ-ಅಧ್ಯಾಪಕಿಯರು. ಆದ್ದರಿಂದ, ಹಲವು ವರ್ಷಗಳು ಕಳೆದಿದ್ದರೂ, ಈಗಲೂ ಆ ಕ್ಷಣಗಳೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತೆ ಇವೆ, ನಿನ್ನೆಯೋ ಮೊನ್ನೆಯೋ ನಡೆದಂತಿವೆ. ಆ ಕಾಲದಲ್ಲಿಯೇ ನನಗೆ ಕವನ ಬರೆಯುವ ಆಸಕ್ತಿ ಮೂಡಿದ್ದು. ಪ್ರಾಥಮಿಕ ಶಾಲೆಯ 'ನೀತಿ ಅವಧಿ (moral period)' ಯಲ್ಲಿ ಮಕ್ಕಳು ಬರೆದ ಕವನಗಳನ್ನು ನಮ್ಮ ಅಧ್ಯಾಪಕರೊಬ್ಬರು ಇಡೀ ತರಗತಿಗೆ ಓದಿ ಹೇಳುತ್ತಿದ್ದುದೇ ನನಗೆ ಕವನ ಬರೆಯಲು ಸ್ಫೂರ್ತಿಯಾಗಿತ್ತು! "ರಸ್ತೆಯ ಅಳು" ಎಂಬ ಶೀರ್ಷಿಕೆಯ ನನ್ನ ಕವನವೊಂದನ್ನು ಆ ಅಧ್ಯಾಪಕರು ಅಳುವ ಧ್ವನಿಯಲ್ಲಿಯೇ ಓದಿ, ಕವನದಲ್ಲಿರುವ ರಸ್ತೆಯ ಬೇಸರದ ಭಾವವನ್ನು ಹಾಗೆಯೇ ಅಭಿವ್ಯಕ್ತಿಗೊಳಿಸಿದಾಗ, ನಾವೆಲ್ಲಾ ನಕ್ಕಿದ್ದು ನನಗಿನ್ನೂ ನೆನಪಿದೆ. ಇದು ಪ್ರಾಥಮಿಕ ಶಾಲೆಯ ಸುಂದರ ಅನುಭವವಾದರೆ ಪ್ರೌಢ ಶಾಲೆಯದು ಇನ್ನೂ ಸುಮಧುರವಾಗಿತ್ತು! ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಘ, ಕಥೆ-ಕವನ ರಚನಾ ಕಮ್ಮಟ, ವಾರ್ಷಿಕೋತ್ಸವಕ್ಕೆ ನಡೆಸುತ್ತಿದ್ದ ಆಶು ಕಥಾ/ಕವಿತಾ ರಚನೆ ಸ್ಪರ್ಧೆ, "ನ ಭೂತೋ ನ ಭವಿಷ್ಯತಿ" ಎಂಬಂತೆ ನಡೆದ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ - ಇವೆಲ್ಲವೂ ನನ್ನ ಬಾಲ್ಯವನ್ನು ಜೀವನದಾದ್ಯಂತ, ಮತ್ತೆ ಮತ್ತೆ ಮೆಲುಕುವ ಸವಿನೆನಪಿನ ಕಣಜವನ್ನಾಗಿಸಿವೆ.

ಆದರೆ ಕಾಲಚಕ್ರ ತಿರುಗಿ ಕಾಲೇಜಿಗೆ ಕಾಲಿಟ್ಟಾಗ, ಶಾಲಾ ದಿನಗಳಲ್ಲಿದ್ದ ಬರವಣಿಗೆಯ ಹವ್ಯಾಸ, ತೆರೆಮರೆಗೆ ಸರಿಯಿತು(ಕಲಿಕೆಗೆ ನೀಡಬೇಕಾದ ಮಹತ್ವದಿಂದಲೋ ಅಥವಾ ಪ್ರೋತ್ಸಾಹ ನೀಡುವ ಕೈಗಳು ಕಾಣೆಯಾಗಿದ್ದರಿಂದಲೋ!). ಆದರೆ ಇಂಜಿನಿಯರಿಂಗ್ ಪದವಿಯ ಕೊನೆಯ ವರುಷದಲ್ಲಿ ಮುನ್ನಾರಿಗೆ ಪ್ರವಾಸಕ್ಕೆ ಹೋದಾಗ, ಆ ಪ್ರಕೃತಿ ವೈಭವಕ್ಕೆ ಮಣಿದು, ಆಗ ಬಹು ಜನಪ್ರಿಯವಾಗಿದ್ದ "ಅನಿಸುತಿದೆ ಯಾಕೋ ಇಂದು" ಹಾಡಿನ ರಾಗದಲ್ಲಿ ಹಾಡಲು ಸಾಧ್ಯವಾಗುವಂತೆ ಒಂದು ಕವಿತೆ ಬರೆದಿದ್ದೆ. ಅದು ಹೊರತು ಪಡಿಸಿದರೆ ಬೇರೇನೂ ಬರೆದೇ ಇಲ್ಲ. ಇಂಜಿನಿಯರಿಂಗ್ ಮುಗಿದು, ವೃತ್ತಿಪರಳಾಗುವ ಮುನ್ನ ಕೆಲ ದಿನಗಳ ಕಾಲ ಮನೆಯಲ್ಲಿದ್ದ ಸಂದರ್ಭದಲ್ಲಿ ಒಮ್ಮೆ ಶಾಲೆಗೆ ಹೋಗಿದ್ದೆ. ಆಗ ನನ್ನ ನೆಚ್ಚಿನ ಕನ್ನಡ ಅಧ್ಯಾಪಕರು ಶಾಲೆಯ ಸಾಹಿತ್ಯ ಸಂಘದ ವಾರದ ಸಭೆಗೆ ಬರಲು ಆಹ್ವಾನವಿತ್ತರು. ತುಂಬಾ ಖುಷಿಯಿಂದ ಸಾಹಿತ್ಯ ಸಂಘ ಈಗ ಹೇಗೆ ನಡೆಯುತ್ತಿದೆ ಎಂದು ನೋಡಹೊರಟೆ. ಆದರೆ ಹಾಗೆ ವೀಕ್ಷಕಳಾಗಿ ನೋಡಲು ಹೋದ ನನಗೆ, ಯಾವ ಪೂರ್ವ ಸೂಚನೆಯನ್ನು ನೀಡದೆ, ಆ ಸಮಯದಲ್ಲಿಯೇ ಮಕ್ಕಳನ್ನುದ್ದೇಶಿಸಿ ಮಾತನಾಡಬೇಕೆಂದು ಅಧ್ಯಾಪಕರು ಹೇಳಿಬಿಡುವುದೇ!? ಅಂತೂ ಅವರ ಪ್ರೀತಿ ಪೂರ್ವಕ ಆದೇಶವನ್ನು ಒಪ್ಪಿಕೊಂಡು ನಾನು ಮಾತನಾಡಲೇಬೇಕಾಯಿತು. ಓದು, ಬರವಣಿಗೆಯಂತಹ ಹವ್ಯಾಸ, ಸಾಹಿತ್ಯಾಸಕ್ತಿ ಮನಸಿಗೆ ಅದೆಷ್ಟು ಆನಂದ ನೀಡುತ್ತದೆ ಎಂದು ಹೇಳುತ್ತಾ, ಕೊನೆಯಲ್ಲಿ ನಾನು ಮುನ್ನಾರಿನಲ್ಲಿ ಬರೆದ ಕವಿತೆಯನ್ನು ಹಾಡಿದೆ.

ನಾನೇನೋ ಹುರುಪಿನಲ್ಲಿ ಮಕ್ಕಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ, ಮಾತಿನ ನಂತರ ಆ ಕವನವನ್ನು ವಾಚಿಸಿದೆ. ಆಮೇಲೆ ಬಂತು ನೋಡಿ ಫಜೀತಿ. ಸಭೆಯ ನಂತರದಲ್ಲಿ ಅಧ್ಯಾಪಕರೆಲ್ಲಾ ತುಂಬಾ ಖುಷಿಯಿಂದ, "ದಿವ್ಯಾ, ನೀನು ಈಗಲೂ ಬರವಣಿಗೆಯ ಹವ್ಯಾಸ ಇಟ್ಟುಕೊಂಡಿರುವುದು ನಮಗೆಲ್ಲ ತುಂಬಾ ಸಂತಸ ನೀಡಿದೆ; ಮತ್ತೊಮ್ಮೆ ನೀನು ಬರಬೇಕು; ನಿನ್ನ ಕವನಗಳನ್ನು ವಾಚಿಸಬೇಕು. ಒಂದು ಸಾಹಿತ್ಯ ಸಂಘದ ವಾರದ ಸಭೆಯ ಸಂಪೂರ್ಣ ಸಮಯವನ್ನು ನಿನಗೇ ಕೊಡುತ್ತೇವೆ. ಮಕ್ಕಳನ್ನುದ್ದೇಶಿಸಿ ಮಾತನಾಡಬೇಕು ಎಂದೇನೂ ಹೇಳುವುದಿಲ್ಲ... ನಿನ್ನ ಕವನ ವಾಚನದ್ದೆ ಕಾರ್ಯಕ್ರಮ ಅಂತ ಇಟ್ಟುಕೊಳ್ಳೋಣ" ಅನ್ನುವುದೇ? ನನಗಾದರೋ ಏನೂ ಬರೆದೇ ಇಲ್ಲ ಈ ಒಂದು ಕವನದ ಹೊರತಾಗಿ - ಎಂದು ನೇರವಾಗಿ ಹೇಳುವುದಕ್ಕೆ ಬೇಸರ; ಆದರೆ ಹೇಳದೆ ಇರಲೂ ಆಗದು ಎನ್ನುವ ಪರಿಸ್ಥಿತಿ! ನಾನು "ಸರ್, ನಾನು ಶಾಲಾ ದಿನಗಳ ನಂತರ ಬರೆದದ್ದು ತುಂಬಾ ಕಡಿಮೆ... ನೀವು ಹಾಗೆ ಕಾರ್ಯಕ್ರಮ ಇಟ್ಟುಕೊಂಡು ಕರೆದರೆ, ಓದುವಷ್ಟು ಕವನಗಳ ಸಂಗ್ರಹ ನನ್ನ ಬಳಿ ಇಲ್ಲ" ಅಂದೆ. ಆದರೂ ಅವರು ನನ್ನ ಮಾತನ್ನು ನಂಬಲು ತಯಾರಿಲ್ಲ! ನಾನು ಸುಮ್ಮನೆ ನಿರಾಕರಿಸುತ್ತಿದ್ದೇನೆ ಅಂತ ಅಂದುಕೊಂಡರೇನೋ...ನನ್ನೊಳಗೆ ಮಾತ್ರ ಬೇಸರ, ಅಪರಾಧಿ ಭಾವ(ಅವರಿಟ್ಟ ನಂಬಿಕೆ ವಿಶ್ವಾಸಗಳನ್ನು ಹುಸಿಗೊಳಿಸುತ್ತಿದ್ದೇನೆ ಎಂದು).

ಇದು ನಡೆದು ಸ್ವಲ್ಪ ದಿನಗಳಿಗೆ ವೃತ್ತಿಜೀವನಕ್ಕಾಗಿ ಮತ್ತೆ ಬೆಂಗಳೂರಿಗೆ ಬರಬೇಕಾಯಿತು. ಹೊಸ ಜನರು, ಹೊಸ ಪರಿಸರ, ಹೊಸ ಜೀವನ ಆರಂಭವಾಯಿತು. ಬಹುಷಃ ನನ್ನ ಶಾಲೆಯಲ್ಲಿ ನಡೆದ ಆ ಘಟನೆಯಿಂದಾಗಿ ನನ್ನಲ್ಲಿ ಮೂಡಿದ ಭಾವನೆಗಳಿಂದಾಗಿಯೋ, ಅಥವಾ ಪ್ರತಿ ತಿಂಗಳೂ ಇಂಟರ್ನಲ್ಸ್ ಬರೆಯುವ ಟೆನ್ಶನ್, ನಾಲ್ಕು ತಿಂಗಳಾಗುತ್ತಲೇ ಓಡೋಡಿ ಬರುವ ಸೆಮಿಸ್ಟರ್ ಪರೀಕ್ಷೆ - ಇವುಗಳಿಂದ ಮುಕ್ತಿ ದೊರೆತದ್ದರಿಂದಲೋ, ಅಥವಾ ಹೊಸ ಪರಿಸರದ ಹೊಸ ಮುಖಗಳ ನಡುವೆ ನಾನು ಏಕಾಂಗಿ ಅಂತ ಎಲ್ಲೋ ಒಂದು ಮೂಲೆಯಲ್ಲಿ ಮೂಡಿದ ಬೇಸರದಿಂದಲೋ, ವೃತ್ತಿ ದಿನಚರಿಯ ಏಕತಾನತೆಯಿಂದಲೋ, - ತೆರೆಮರೆಗೆ ಸರಿದ ನನ್ನ ಬರವಣಿಗೆ ಮತ್ತೆ ಬೆಳಕಿಗೆ ಬಂತು! ಅದಕ್ಕಾಗಿ ನನಗೆ ಸಂತೋಷವಿದೆ. ಇನ್ನು ಮುಂಬರುವ ದಿನಗಳಲ್ಲಿ ಕವನಗಳ ಜೊತೆಗೆ ಲೇಖನ/ಪ್ರಬಂಧ/ಕಥನ ಹೀಗೆ ಇತರ ಪ್ರಕಾರಗಳಿಗೂ ನನ್ನ ಆಸಕ್ತಿಯನ್ನು ಬೆಳೆಸಬೇಕು ಎಂಬ ಹಂಬಲವಿದೆ. ಭಾವ ಜೀವ ತಳೆದಾಗ ಅದನ್ನು ಅಕ್ಷರಕ್ಕಿಳಿಸುವ ಪ್ರಯತ್ನ ಮಾಡುತ್ತೇನೆ. ಈ ಪ್ರಯತ್ನ ನಿರಂತರವಾಗಿರಲಿ ಎಂದು ಹಾರೈಸುವಿರಲ್ಲವೇ?