Monday, January 4, 2010

ವರ್ಷ ತುಂಬಿದ ಸಂಭ್ರಮದಲ್ಲಿ!


ಇಂದು "ಭಾವ ಜೀವ ತಳೆದಾಗ"ಕ್ಕೆ ವರ್ಷ ತುಂಬಿದ ಸಂಭ್ರಮ. ಒಮ್ಮೆ ಹಿನ್ನೋಟ ಬೀರಿದಾಗ ಆಶ್ಚರ್ಯ ಖುಷಿ ಜೊತೆಜೊತೆಗೆ ಆಗುತ್ತಿದೆ. ಆಶ್ಚರ್ಯ ಯಾಕೆಂದರೆ - ಬ್ಲಾಗು ಆರಂಭ ಮಾಡುವಾಗ, ಅಂತರ್ಜಾಲದಲ್ಲಿ ಇಷ್ಟೊಂದು ಕನ್ನಡ ಬ್ಲಾಗುಗಳಿವೆ ಎಂದಾಗಲೀ, ಇಷ್ಟೊಂದು ಸಂಖ್ಯೆಯ ಕನ್ನಡ ಅಭಿಮಾನ, ಸಾಹಿತ್ಯಾಸಕ್ತಿ ಇರುವ ಮಿತ್ರರೂ ಸಿಗುತ್ತಾರೆ ಎಂಬ ಯೋಚನೆಯಾಗಲೀ ನನಗೆ ಇರಲೇ ಇಲ್ಲ ಎನ್ನುವುದಕ್ಕೆ. ಖುಷಿ ಯಾಕೆಂದರೆ - ನಿರೀಕ್ಷೆಗೆ ಮೀರಿ ಕನ್ನಡ ಬರಹಗಳನ್ನು, ಬ್ಲಾಗುಗಳನ್ನು, ಸ್ನೇಹಿತರನ್ನು ಕಂಡುಕೊಂಡಿದ್ದಕ್ಕೆ, ಎಲ್ಲರ ಪ್ರೋತ್ಸಾಹ ದೊರಕಿದ್ದಕ್ಕೆ. ಈ ಅಭಿಯಾನದಲ್ಲಿ ನಿರಂತರ ಪ್ರೋತ್ಸಾಹ, ಸಲಹೆ ಸೂಚನೆಗಳನ್ನು ನೀಡಿದ ಸಹೃದಯ ಮಿತ್ರರಿಗೆಲ್ಲಾ ನಾನು ಸದಾ ಋಣಿ.

ಈ ಸಂದರ್ಭದಲ್ಲಿ ನಾನು ಬ್ಲಾಗು ಆರಂಭಿಸಿದ ಹಿನ್ನೆಲೆ, ನನ್ನಲ್ಲಿ ಮೂಲತಹ ಸಾಹಿತ್ಯಾಸಕ್ತಿ ಮೂಡಿದ ಬಗೆ - ಇವೆಲ್ಲಾ ನನ್ನ ನೆನಪಿನಾಳದಿಂದ ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿವೆ. ಪ್ರಥಮವಾಗಿ ನನ್ನಲ್ಲಿ ಸಾಹಿತ್ಯಾಸಕ್ತಿ ಮಾಡಿದ್ದು - ಶಾಲಾ ದಿನಗಳಲ್ಲಿ. ನನ್ನ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ಪಾಠ ಪ್ರವಚನಗಳಷ್ಟೇ, ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹವಿತ್ತು. ಅದಕ್ಕಾಗಿಯೇ ನನ್ನ ಶಾಲೆ, ಶಾಲಾ ಶಿಕ್ಷಕ-ಶಿಕ್ಷಕಿಯರ ಬಗ್ಗೆ ನನಗೆ ತುಂಬಾ ಅಭಿಮಾನ, ಪ್ರೀತಿ. ಬಹುಷಃ ಎಲ್ಲರ ಜೀವನದಲ್ಲೂ, ಕಾಲೇಜಿನ ದಿನಗಳಿಗಿಂತ ಶಾಲಾ ದಿನಗಳ ನೆನಪುಗಳೇ ಮಧುರವಾಗಿರಬಹುದು. ಆ ಪ್ರಾಯವೇ ಅಂಥದ್ದು - ಮುಗ್ಧತೆ ಇನ್ನೂ ಮಾಸಿರುವುದಿಲ್ಲ; ಮಹತ್ತರವಾದ ಬೇರೆ ಜವಾಬ್ದಾರಿ/ಒತ್ತಡಗಳೂ ಇರುವುದಿಲ್ಲ (ಈಗಿನ ಮಕ್ಕಳ ಬಗ್ಗೆ ಗೊತ್ತಿಲ್ಲ :-( !! ). ನನ್ನ ಬಾಲ್ಯವನ್ನು ಅತ್ಯಂತ ಮಧುರವನ್ನಾಗಿಸಿದ್ದು - ನಾನು ಕಲಿತ ಶಾಲೆ, ನನ್ನ ಅಧ್ಯಾಪಕ-ಅಧ್ಯಾಪಕಿಯರು. ಆದ್ದರಿಂದ, ಹಲವು ವರ್ಷಗಳು ಕಳೆದಿದ್ದರೂ, ಈಗಲೂ ಆ ಕ್ಷಣಗಳೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತೆ ಇವೆ, ನಿನ್ನೆಯೋ ಮೊನ್ನೆಯೋ ನಡೆದಂತಿವೆ. ಆ ಕಾಲದಲ್ಲಿಯೇ ನನಗೆ ಕವನ ಬರೆಯುವ ಆಸಕ್ತಿ ಮೂಡಿದ್ದು. ಪ್ರಾಥಮಿಕ ಶಾಲೆಯ 'ನೀತಿ ಅವಧಿ (moral period)' ಯಲ್ಲಿ ಮಕ್ಕಳು ಬರೆದ ಕವನಗಳನ್ನು ನಮ್ಮ ಅಧ್ಯಾಪಕರೊಬ್ಬರು ಇಡೀ ತರಗತಿಗೆ ಓದಿ ಹೇಳುತ್ತಿದ್ದುದೇ ನನಗೆ ಕವನ ಬರೆಯಲು ಸ್ಫೂರ್ತಿಯಾಗಿತ್ತು! "ರಸ್ತೆಯ ಅಳು" ಎಂಬ ಶೀರ್ಷಿಕೆಯ ನನ್ನ ಕವನವೊಂದನ್ನು ಆ ಅಧ್ಯಾಪಕರು ಅಳುವ ಧ್ವನಿಯಲ್ಲಿಯೇ ಓದಿ, ಕವನದಲ್ಲಿರುವ ರಸ್ತೆಯ ಬೇಸರದ ಭಾವವನ್ನು ಹಾಗೆಯೇ ಅಭಿವ್ಯಕ್ತಿಗೊಳಿಸಿದಾಗ, ನಾವೆಲ್ಲಾ ನಕ್ಕಿದ್ದು ನನಗಿನ್ನೂ ನೆನಪಿದೆ. ಇದು ಪ್ರಾಥಮಿಕ ಶಾಲೆಯ ಸುಂದರ ಅನುಭವವಾದರೆ ಪ್ರೌಢ ಶಾಲೆಯದು ಇನ್ನೂ ಸುಮಧುರವಾಗಿತ್ತು! ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಘ, ಕಥೆ-ಕವನ ರಚನಾ ಕಮ್ಮಟ, ವಾರ್ಷಿಕೋತ್ಸವಕ್ಕೆ ನಡೆಸುತ್ತಿದ್ದ ಆಶು ಕಥಾ/ಕವಿತಾ ರಚನೆ ಸ್ಪರ್ಧೆ, "ನ ಭೂತೋ ನ ಭವಿಷ್ಯತಿ" ಎಂಬಂತೆ ನಡೆದ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ - ಇವೆಲ್ಲವೂ ನನ್ನ ಬಾಲ್ಯವನ್ನು ಜೀವನದಾದ್ಯಂತ, ಮತ್ತೆ ಮತ್ತೆ ಮೆಲುಕುವ ಸವಿನೆನಪಿನ ಕಣಜವನ್ನಾಗಿಸಿವೆ.

ಆದರೆ ಕಾಲಚಕ್ರ ತಿರುಗಿ ಕಾಲೇಜಿಗೆ ಕಾಲಿಟ್ಟಾಗ, ಶಾಲಾ ದಿನಗಳಲ್ಲಿದ್ದ ಬರವಣಿಗೆಯ ಹವ್ಯಾಸ, ತೆರೆಮರೆಗೆ ಸರಿಯಿತು(ಕಲಿಕೆಗೆ ನೀಡಬೇಕಾದ ಮಹತ್ವದಿಂದಲೋ ಅಥವಾ ಪ್ರೋತ್ಸಾಹ ನೀಡುವ ಕೈಗಳು ಕಾಣೆಯಾಗಿದ್ದರಿಂದಲೋ!). ಆದರೆ ಇಂಜಿನಿಯರಿಂಗ್ ಪದವಿಯ ಕೊನೆಯ ವರುಷದಲ್ಲಿ ಮುನ್ನಾರಿಗೆ ಪ್ರವಾಸಕ್ಕೆ ಹೋದಾಗ, ಆ ಪ್ರಕೃತಿ ವೈಭವಕ್ಕೆ ಮಣಿದು, ಆಗ ಬಹು ಜನಪ್ರಿಯವಾಗಿದ್ದ "ಅನಿಸುತಿದೆ ಯಾಕೋ ಇಂದು" ಹಾಡಿನ ರಾಗದಲ್ಲಿ ಹಾಡಲು ಸಾಧ್ಯವಾಗುವಂತೆ ಒಂದು ಕವಿತೆ ಬರೆದಿದ್ದೆ. ಅದು ಹೊರತು ಪಡಿಸಿದರೆ ಬೇರೇನೂ ಬರೆದೇ ಇಲ್ಲ. ಇಂಜಿನಿಯರಿಂಗ್ ಮುಗಿದು, ವೃತ್ತಿಪರಳಾಗುವ ಮುನ್ನ ಕೆಲ ದಿನಗಳ ಕಾಲ ಮನೆಯಲ್ಲಿದ್ದ ಸಂದರ್ಭದಲ್ಲಿ ಒಮ್ಮೆ ಶಾಲೆಗೆ ಹೋಗಿದ್ದೆ. ಆಗ ನನ್ನ ನೆಚ್ಚಿನ ಕನ್ನಡ ಅಧ್ಯಾಪಕರು ಶಾಲೆಯ ಸಾಹಿತ್ಯ ಸಂಘದ ವಾರದ ಸಭೆಗೆ ಬರಲು ಆಹ್ವಾನವಿತ್ತರು. ತುಂಬಾ ಖುಷಿಯಿಂದ ಸಾಹಿತ್ಯ ಸಂಘ ಈಗ ಹೇಗೆ ನಡೆಯುತ್ತಿದೆ ಎಂದು ನೋಡಹೊರಟೆ. ಆದರೆ ಹಾಗೆ ವೀಕ್ಷಕಳಾಗಿ ನೋಡಲು ಹೋದ ನನಗೆ, ಯಾವ ಪೂರ್ವ ಸೂಚನೆಯನ್ನು ನೀಡದೆ, ಆ ಸಮಯದಲ್ಲಿಯೇ ಮಕ್ಕಳನ್ನುದ್ದೇಶಿಸಿ ಮಾತನಾಡಬೇಕೆಂದು ಅಧ್ಯಾಪಕರು ಹೇಳಿಬಿಡುವುದೇ!? ಅಂತೂ ಅವರ ಪ್ರೀತಿ ಪೂರ್ವಕ ಆದೇಶವನ್ನು ಒಪ್ಪಿಕೊಂಡು ನಾನು ಮಾತನಾಡಲೇಬೇಕಾಯಿತು. ಓದು, ಬರವಣಿಗೆಯಂತಹ ಹವ್ಯಾಸ, ಸಾಹಿತ್ಯಾಸಕ್ತಿ ಮನಸಿಗೆ ಅದೆಷ್ಟು ಆನಂದ ನೀಡುತ್ತದೆ ಎಂದು ಹೇಳುತ್ತಾ, ಕೊನೆಯಲ್ಲಿ ನಾನು ಮುನ್ನಾರಿನಲ್ಲಿ ಬರೆದ ಕವಿತೆಯನ್ನು ಹಾಡಿದೆ.

ನಾನೇನೋ ಹುರುಪಿನಲ್ಲಿ ಮಕ್ಕಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ, ಮಾತಿನ ನಂತರ ಆ ಕವನವನ್ನು ವಾಚಿಸಿದೆ. ಆಮೇಲೆ ಬಂತು ನೋಡಿ ಫಜೀತಿ. ಸಭೆಯ ನಂತರದಲ್ಲಿ ಅಧ್ಯಾಪಕರೆಲ್ಲಾ ತುಂಬಾ ಖುಷಿಯಿಂದ, "ದಿವ್ಯಾ, ನೀನು ಈಗಲೂ ಬರವಣಿಗೆಯ ಹವ್ಯಾಸ ಇಟ್ಟುಕೊಂಡಿರುವುದು ನಮಗೆಲ್ಲ ತುಂಬಾ ಸಂತಸ ನೀಡಿದೆ; ಮತ್ತೊಮ್ಮೆ ನೀನು ಬರಬೇಕು; ನಿನ್ನ ಕವನಗಳನ್ನು ವಾಚಿಸಬೇಕು. ಒಂದು ಸಾಹಿತ್ಯ ಸಂಘದ ವಾರದ ಸಭೆಯ ಸಂಪೂರ್ಣ ಸಮಯವನ್ನು ನಿನಗೇ ಕೊಡುತ್ತೇವೆ. ಮಕ್ಕಳನ್ನುದ್ದೇಶಿಸಿ ಮಾತನಾಡಬೇಕು ಎಂದೇನೂ ಹೇಳುವುದಿಲ್ಲ... ನಿನ್ನ ಕವನ ವಾಚನದ್ದೆ ಕಾರ್ಯಕ್ರಮ ಅಂತ ಇಟ್ಟುಕೊಳ್ಳೋಣ" ಅನ್ನುವುದೇ? ನನಗಾದರೋ ಏನೂ ಬರೆದೇ ಇಲ್ಲ ಈ ಒಂದು ಕವನದ ಹೊರತಾಗಿ - ಎಂದು ನೇರವಾಗಿ ಹೇಳುವುದಕ್ಕೆ ಬೇಸರ; ಆದರೆ ಹೇಳದೆ ಇರಲೂ ಆಗದು ಎನ್ನುವ ಪರಿಸ್ಥಿತಿ! ನಾನು "ಸರ್, ನಾನು ಶಾಲಾ ದಿನಗಳ ನಂತರ ಬರೆದದ್ದು ತುಂಬಾ ಕಡಿಮೆ... ನೀವು ಹಾಗೆ ಕಾರ್ಯಕ್ರಮ ಇಟ್ಟುಕೊಂಡು ಕರೆದರೆ, ಓದುವಷ್ಟು ಕವನಗಳ ಸಂಗ್ರಹ ನನ್ನ ಬಳಿ ಇಲ್ಲ" ಅಂದೆ. ಆದರೂ ಅವರು ನನ್ನ ಮಾತನ್ನು ನಂಬಲು ತಯಾರಿಲ್ಲ! ನಾನು ಸುಮ್ಮನೆ ನಿರಾಕರಿಸುತ್ತಿದ್ದೇನೆ ಅಂತ ಅಂದುಕೊಂಡರೇನೋ...ನನ್ನೊಳಗೆ ಮಾತ್ರ ಬೇಸರ, ಅಪರಾಧಿ ಭಾವ(ಅವರಿಟ್ಟ ನಂಬಿಕೆ ವಿಶ್ವಾಸಗಳನ್ನು ಹುಸಿಗೊಳಿಸುತ್ತಿದ್ದೇನೆ ಎಂದು).

ಇದು ನಡೆದು ಸ್ವಲ್ಪ ದಿನಗಳಿಗೆ ವೃತ್ತಿಜೀವನಕ್ಕಾಗಿ ಮತ್ತೆ ಬೆಂಗಳೂರಿಗೆ ಬರಬೇಕಾಯಿತು. ಹೊಸ ಜನರು, ಹೊಸ ಪರಿಸರ, ಹೊಸ ಜೀವನ ಆರಂಭವಾಯಿತು. ಬಹುಷಃ ನನ್ನ ಶಾಲೆಯಲ್ಲಿ ನಡೆದ ಆ ಘಟನೆಯಿಂದಾಗಿ ನನ್ನಲ್ಲಿ ಮೂಡಿದ ಭಾವನೆಗಳಿಂದಾಗಿಯೋ, ಅಥವಾ ಪ್ರತಿ ತಿಂಗಳೂ ಇಂಟರ್ನಲ್ಸ್ ಬರೆಯುವ ಟೆನ್ಶನ್, ನಾಲ್ಕು ತಿಂಗಳಾಗುತ್ತಲೇ ಓಡೋಡಿ ಬರುವ ಸೆಮಿಸ್ಟರ್ ಪರೀಕ್ಷೆ - ಇವುಗಳಿಂದ ಮುಕ್ತಿ ದೊರೆತದ್ದರಿಂದಲೋ, ಅಥವಾ ಹೊಸ ಪರಿಸರದ ಹೊಸ ಮುಖಗಳ ನಡುವೆ ನಾನು ಏಕಾಂಗಿ ಅಂತ ಎಲ್ಲೋ ಒಂದು ಮೂಲೆಯಲ್ಲಿ ಮೂಡಿದ ಬೇಸರದಿಂದಲೋ, ವೃತ್ತಿ ದಿನಚರಿಯ ಏಕತಾನತೆಯಿಂದಲೋ, - ತೆರೆಮರೆಗೆ ಸರಿದ ನನ್ನ ಬರವಣಿಗೆ ಮತ್ತೆ ಬೆಳಕಿಗೆ ಬಂತು! ಅದಕ್ಕಾಗಿ ನನಗೆ ಸಂತೋಷವಿದೆ. ಇನ್ನು ಮುಂಬರುವ ದಿನಗಳಲ್ಲಿ ಕವನಗಳ ಜೊತೆಗೆ ಲೇಖನ/ಪ್ರಬಂಧ/ಕಥನ ಹೀಗೆ ಇತರ ಪ್ರಕಾರಗಳಿಗೂ ನನ್ನ ಆಸಕ್ತಿಯನ್ನು ಬೆಳೆಸಬೇಕು ಎಂಬ ಹಂಬಲವಿದೆ. ಭಾವ ಜೀವ ತಳೆದಾಗ ಅದನ್ನು ಅಕ್ಷರಕ್ಕಿಳಿಸುವ ಪ್ರಯತ್ನ ಮಾಡುತ್ತೇನೆ. ಈ ಪ್ರಯತ್ನ ನಿರಂತರವಾಗಿರಲಿ ಎಂದು ಹಾರೈಸುವಿರಲ್ಲವೇ?

11 comments:

  1. ಶುಭಾಶಯಾರೀ.. ಭಾವವೃಷ್ಟಿ ಆಗ್ತಲೇ ಇರ್ಲಿ. :-)

    ReplyDelete
  2. ದಿವ್ಯ,
    ಶುಭಾಶಯಗಳು.....
    ಹೀಗೆ ನೂರಾರು ವರ್ಷ ಕಾಣಲಿ.....

    ReplyDelete
  3. ವರುಷದ ಹರುಶಕ್ಕೆ ಶುಭಾಷಯ
    ಇನ್ನೂ ಹೆಚ್ಚು ಹೆಚ್ಚು ಬರೆಯುತ್ತಿರಿ

    ReplyDelete
  4. ತಪ್ಪದೆ ಹಾರೈಸುತ್ತೇವೆ... :)
    ವರ್ಷ ಕಳೆದ "ಭಾವ ಜೀವ ತಳೆದಾಗ" ಗೆ ನಮ್ಮ ಶುಭ ಹಾರೈಕೆಗಳು.
    ಹೀಗೆ ಬರೆಯುತ್ತಿರಿ..

    ReplyDelete
  5. Namasthe Divya..
    Wishing you on the first B'day..
    Keep Writing..
    tAke cAre :)

    ReplyDelete
  6. ವರ್ಷದ ಶುಭಾಶಯಗಳು.. ಬ್ಲಾಗು ಚೆನ್ನಾಗಿ ಬರ್ತಿದೆ... ಭಾವ ಜೀವ ತಳೀತಾ ಇರ್ಲಿ.. ಬರೀತಿರಿ..

    ReplyDelete
  7. ಶುಭಾಶಯಗಳು! ನಿಮ್ಮ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸುವ ಸಂದರ್ಭಗಳನ್ನು ಇನ್ನಷ್ಟು ಹೆಚ್ಚಾಗಿ, ಹೆಚ್ಚು ಬರಹಗಳು ಮೂಡಿ ಬರಲಿ!

    ReplyDelete
  8. Congrats Divya!!!

    Hope the new year brings out more creativity from you

    Only the best for you dear
    :-)
    malathi S

    ReplyDelete
  9. ಶುಭ ಹಾರೈಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು.
    -ದಿವ್ಯಾ.

    ReplyDelete
  10. ದಿವ್ಯಾ, ಅಭಿನಂದನೆಗಳು ವಾರ್ಷಿಕೋತ್ಸವಕ್ಕೆ.... ಶುಭಾಷಯಗಳು ಮುಂದಿನ ಪಯಣಕ್ಕೆ....

    ReplyDelete