Wednesday, May 11, 2022

ಊರಿಂದ ಹೊರಟಾಗ...

ಹೆದ್ದಾರಿಯಲ್ಲಿ ಓವರ್ ಟೇಕ್
ಮಾಡುವ ವಾಹನಗಳ ವೇಗ
ಮನಸ್ಸಿನಲ್ಲಿ ಕಳೆದ ವಾರದ
ಸವಿನೆನಪುಗಳ ಓಘ..


ಕಡಲತಡಿಯಲಿ ಕಳೆದ ಮಧುರ ಸಂಜೆ
ಎಲ್ಲರನ್ನೂ ಮತ್ತೆ ಭೇಟಿಮಾಡಿಸಿದ ಮುಂಜಿ
ರಾತ್ರಿ ನೋಡಿದ ತೇರು, ಜಾತ್ರೆಯ ಚೆಲುವು
ಅಪರಾತ್ರಿಯಾದರೂ ಕರೆವ ಅಕ್ಕನ ಒಲವು


ವರುಷಗಳ ನಂತರ ಸಿಕ್ಕ ಗೆಳೆಯರು
ಆಡಿದ ಮಾತುಗಳು ನೂರಾರು
ಬಾಕಿ ಉಳಿದಿವೆ ಇನ್ನೂ ಹಲವಾರು
ಮಾಡಿದೆ ಮುಂದಿನ ಭೇಟಿ ಜರೂರು


ಮಾಡಿ ಪಂಚವಿಧ ಭಕ್ಶ್ಯ ಭೋಜನ
ಆದರಿಸಿ ಕರೆವರು ಅತ್ತೆ ದೊಡ್ಡಮ್ಮ
ಪಟ್ಟಿ ಮಾಡಿ ಮಿಸ್ಸಾಗದಂತೆ ಯಾವುದೇ ಐಟಮ್ಮು
ಮಾವು ಹಲಸು ಉಂಡೆ ತುಂಬಿ ಕೊಡುವ ಅಮ್ಮ


ಕಿಚಿ ಕಿಚಿ ಶೆಖೆಗೆ ಹಾಯೆನಿಸುವಂತೆ ಎ.ಸಿ.ಯ ತಂಪು
ಧಾವಂತದ ದಿನಚರಿಗೆ ಒಂದು ವಾರ ರಜೆಯ ಕಂಪು
ನಾಳೆಯ ಸೂರ್ಯ ತರುವನು ಹೊಸ ಉತ್ಸಾಹ
ಮತ್ತೆ ಮೂಡುವುದು ನವಚೈತನ್ಯ ನಿಸ್ಸಂದೇಹ!


ಅಶ್ರುತರ್ಪಣ

ಬಾಲ್ಯ ಎಂಬ ಹೊತ್ತಗೆಯಲ್ಲಿ

ಅಜ್ಜಿಯದೇ ಮಹಾ ಪರ್ವ

ಅವಳಿಲ್ಲದ ಪುಟಗಳೇ ಇಲ್ಲ

ಬಾಲ್ಯವೆಂದರೆ ಅವಳೇ ಎಲ್ಲಾ..


ಮಹಾಭಾರತ ರಾಮಾಯಣದ ಕಥೆ ಹೇಳಲು

ಅಪ್ಪಿಕೊಂಡು ಗುಬ್ಬಚ್ಚಿಯಾಗಿ ಮಲಗಲು

ರವಿವಾರ ಬಿಸಿಬಿಸಿ ತಲೆಸ್ನಾನ ಮಾಡಿಸಲು

ಗೈಡ್ಸ್ ಯೂನಿಫಾರಂಗೆ ಎರಡು ಜಡೆ ಕಟ್ಟಲು

ಎಲ್ಲಕ್ಕೂ ನಮಗೆ ಅಜ್ಜಿಯೇ ಬೇಕು..


ಕಾಲುಗಂಟಿನ ಗಾಯಕ್ಕೆ ಡೆಟ್ಟಾಲು ಹಚ್ಚಿದ್ದು

ಬಡ್ಡಿ ಶೇಕಡಾ ಲೆಕ್ಕವ ತಲೆಯಲ್ಲಿ ತುಂಬಿದ್ದು

"ಮಿತ್ರಸಮಾಜ"ದಲ್ಲಿ ಮಸಾಲೆದೋಸೆ ತಿನ್ನಿಸಿದ್ದು

ರಥಬೀದಿ ಉತ್ಸವದಿ ಬಲೂನು ಕೊಡಿಸಿದ್ದು

ಎಲ್ಲಕ್ಕೂ ನಮ್ಮ ಅಜ್ಜಿಯೇ ಸೈ..


ಇದೆಲ್ಲಾ ನಾವು ನೋಡಿದ ಅಜ್ಜಿ

ಒಂದು ಕಡಲಿನ ಸುಂದರ ಚಿತ್ರದಂತೆ..

ಅದರ ಹಿಂದಿರುವುದು ಮಹಾ-

ಬಿರುಗಾಳಿಯ ಎದುರಿಸಿಯೂ ಎಲ್ಲರನು

ದಡ ಸೇರಿಸಿದ ಒಂದು ದಿಟ್ಟೆಯ ಕತೆ.


ಹೌದು! ಅವಳೊಂದು ಶಿವಗಾಮಿಯಂತೆ

ರವಿ ಉಚ್ಛದಲ್ಲಿದ್ದು ಹುಟ್ಟಿದ ಕೆಚ್ಚೆದೆಯ ಹೆಣ್ಣು!

ಹತ್ತು ಹಲವರ ಧೈರ್ಯವನು ಒಬ್ಬಳೇ ತಳೆದು ಬಂದಳು

ನೂರು ಜನರ ಬದುಕಿಗೆ ದಾರಿ ದೀಪವಾದಳು


ಒಮ್ಮೆ ಕೇಳಿದ್ದೆ ಚಿಕ್ಕವಳಿದ್ದಾಗ - ಹೇಗಜ್ಜೀ

ನಿನಗೆ ಅಷ್ಟೊಂದು ಧೈರ್ಯ? ನಿರ್ಭಯತೆ?

ಅಜ್ಜಿ ಹೇಳಿದ್ದರು "ಪೆಟ್ಟು ತಿಂದು ತಿಂದೂ 

ಕಲ್ಲಾದ ಮೇಲೆ ನೋವಿನ ನೆನಪೇ ಇರದು.

ಕೊಲ್ಲುವವನಿಗಿಂತ ಕಾಯುವವ ದೊಡ್ಡವ

ಎಂದು ನೆನಪಿದ್ದರೆ ಅಷ್ಟೇ ಸಾಕು!!"


ಅಜ್ಜಿಯ ಧೀಶಕ್ತಿಗೆ ನಾವು ಸದಾ ಬೆರಗಾಗಿದ್ದೇವೆ..

ಅವಳ ಎಂಭತ್ತರ ಉತ್ಸಾಹಕ್ಕೆ ನಾಚಿ ನೀರಾಗಿದ್ದೇವೆ..

ಆದರೆ ಇನ್ನು ಊರಿಂದ ಹೊರಟಾಗ ಕಾಲಿಗೆ ನಮಸ್ಕರಿಸಿ 

ಆಶೀರ್ವಾದ ಪಡೆಯಲು ಅಜ್ಜಿಯೇ ಇಲ್ಲಾ 

ಮನದ ತುಂಬಾ ಸದಾ ಅವಳೇ ಎಲ್ಲಾ..


A poem in sad demise of our grandmother..

Written on 4th June, 2017.

Smt. Srimathi Mallya

25/04/1932 - 24/05/2017